ದರ್ಶನ್ ರನ್ನು ಫಾಲೋ ಮಾಡೋದು ನಿಲ್ಲಿಸಿದ ಪತ್ನಿ ವಿಜಯ’ಲಕ್ಷ್ಮೀ’!

ಬೆಂಗಳೂರು: ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೆಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಂಡ್ ಟೀಂ ಪೊಲೀಸ್ ಕಸ್ಟಡಿಯಲ್ಲಿದೆ. ಈ ಮಧ್ಯೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಇನ್‍ ಸ್ಟಾದಲ್ಲಿ ಅನ್‍ ಫಾಲೋ ಮಾಡಿದ್ದಾರೆ.

ಅನ್‍ಫಾಲೋ ಜೊತೆಗೆ ತಮ್ಮ ಇನ್‍ಸ್ಟಾ ಖಾತೆಯ ಡಿಪಿ ಡಿಲಿಟ್ ಮಾಡಿದ್ದಾರೆ. ಪವಿತ್ರಾ ವಿಚಾರದಲ್ಲಿ ದರ್ಶನ್ (Challenging Star Darshan) ಆಗಾಗ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ. ಇದು ಕೂಡ ಪವಿತ್ರಾಗಾಗಿಯೇ ನಡೆದಿದೆ. ಹೀಗಾಗಿಯೇ ಬಹುಶಃ ವಿಜಯಲಕ್ಷ್ಮೀ ಅವರಿಗೆ ಕೋಪ ಬಂದಿರಬಹುದು ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ ಸ್ಟಾದಲ್ಲಿ ಪವಿತ್ರಾ ಗೌಡ (Pavithra Gowda) ಪತಿ ಹಾಗೂ ಮಗಳ ಕುರಿತು ಫೋಟೋ ಶೇರ್ ಮಾಡಿ ಮಾತಿನ ದಾಳಿ ನಡೆಸಿದ್ದರು. ದರ್ಶನ್ ಅಭಿಮಾನಿಯೇ ಆಗಿದ್ದ ರೇಣುಕಾಸ್ವಾಮಿಯವರು ವಿಜಯಲಕ್ಷ್ಮಿ ದರ್ಶನ್ ಪರ ಅನುಕಂಪ ಹೊಂದಿದ್ದರು. ಹೀಗಾಗಿ ಪವಿತ್ರಾ ಗೌಡ ಪೋಸ್ಟ್ ಗೆ ಬೇಸರದಿಂದ ಕಾಮೆಂಟ್ ಮಾಡುತ್ತಿದ್ದರು ಎನ್ನಲಾಗಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯು (Renukaswamy) ತನ್ನ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದನೆಂದು ಸಿಟ್ಟಿಗೆದ್ದು ದರ್ಶನ್ ಹಾಗೂ ಗ್ಯಾಂಗ್ ಆತನನ್ನು ಕಿಡ್ನಾಪ್ ಮಾಡಿ ಬೆಂಗಳೂರಿನಲ್ಲಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದೆ. ಪ್ರಕರಣ ಸಂಬಂಧ ಇದೀಗ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, 6 ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ