ಸಂವಿಧಾನ ಬರೆದಿದ್ದು ಅಂಬೇಡ್ಕರ್: ಜಾತಿ ಬಿಟ್ಟು ಒಂದಾಗಿ ಬಾಳಿ

ಸಂವಿಧಾನ ಬರೆದಿದ್ದು ಅಂಬೇಡ್ಕರ್: ಜಾತಿ ಬಿಟ್ಟು ಒಂದಾಗಿ ಬಾಳಿ

ಬಳ್ಳಾರಿ: ಪ್ರತಿಯೊಬ್ಬರೂ ಜಾತಿ ಭೇದ ಬಿಟ್ಟು ಒಂದಾಗಿ ಬದುಕು ಸಾಗಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕಂಪ್ಲಿ ಪಟ್ಟಣದ ಶಾರದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ‘ವಕ್ಫ್ ಹಠಾವೋ ದೇಶ ಬಚಾವೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ವಕ್ಫ್ ಮಂಡಳಿ ದೇಶಕ್ಕೆ ಅಂಟಿದ ಕ್ಯಾನ್ಸರ್‌. ದೇಶಕ್ಕೆ ಮುಂದೊಂದು ದಿನ ವಕ್ಫ್ ಶಾಪವಾಗಲಿದೆ. ಬೀದರ್‌ ಜಿಲ್ಲೆಯಲ್ಲಿನ ಬಸವಣ್ಣ ಅವರ ಅನುಭವ ಮಂಟಪ ಪೀರ್‌ ಬಾಷಾ ದರ್ಗಾ ಆಗಿದೆ ಎಂದು ಕಿಡಿಕಾರಿದ್ದಾರೆ.
ಸಂವಿಧಾನ ಬರೆದಿದ್ದು, ಅಂಬೇಡ್ಕರ್. ಲಿಂಗಾಯತರು, ಬ್ರಾಹ್ಮಣರು ಅಲ್ಲ. ಹೀಗಾಗಿ ನಾವೆಲ್ಲ ಒಂದೇ ಎಂಬ ಭಾವ ಪ್ರತಿಯೊಬ್ಬರಲ್ಲಿಯೂ ಬರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಇತ್ತೀಚೆಗೆ ಸ್ವಾಮೀಜಿಗಳಿಗೆ ರಾಜಕೀಯ ರುಚಿ ಹೆಚ್ಚಾಗಿದೆ. ಹೀಗಾಗಿ ಹಲವರು ವಿಧಾನಸೌಧದಲ್ಲೇ ಇರುತ್ತಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಮನೆಯಲ್ಲಿರುತ್ತಾರೆ. ಸ್ವಾಮೀಜಿಗಳು ಮಾತ್ರ ವಿಧಾನಸೌಧದಲ್ಲೇ ಇರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಕಲ್ಮಠದ ಪ್ರಭುಮಹಾಸ್ವಾಮಿ, ಹಂಪೆ ಮಾತಂಗಪರ್ವತದ ಪೂರ್ಣಾನಂದ ಭಾರತಿಶ್ರೀ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ಧೇಶ್ವರ್‌, ಮಾಜಿ ಸಂಸದ ಬಿ.ವಿ.ನಾಯಕ್‌, ಪ್ರತಾಪ್‌ಸಿಂಹ ಸೇರಿದಂತೆ ಹಲವರು ಇದ್ದರು.

ಈ ಸುದ್ದಿ ಹಂಚಿಕೊಳ್ಳಿ