ತಂಗಿಗೆ ನಕಲು ಮಾಡಲು ಅವಕಾಶ ನೀಡದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ!

ಕಲಬುರಗಿ: ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಯುವಕನೋರ್ವ  ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ತನ್ನ ತಂಗಿಗೆ ಪಿಯು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕಾರ ನೀಡಿಲ್ಲ ಎಂದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಅಫಜಲಪುರ್ ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಕೈಲಾಸ್ ಎಂಬಾತ ಪೊಲೀಸ್ ಪೇದೆ ಪಂಡಿತ್ ಪಾಂಡ್ರೆ ಮೇಲೆ ಹಲ್ಲೆ ನಡೆಸಿದ್ದಾನೆ. ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ ಎಂದು ರೊಚ್ಚಿಗೆದ್ದ ಕೈಲಾಸ್, ಪಂಡಿತ್ ಪಾಂಡ್ರೆ ಮೇಲೆ ಹಲ್ಲೆ ನಡೆಸಿದ್ದಾನೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಲಾಸ್ ಹಾಗೂ ಆತನ ಸ್ನೇಹಿತ ಸಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಹಂಚಿಕೊಳ್ಳಿ